Monday, September 29, 2008

ಬೊಗಸೆ ಬೆಳಕು

ಹಾಸನ ಸ್ಥಳೀಯ ಪತ್ರಿಕೆ ಹಾಸನವಾಣಿಯ ಭಾನುವಾರದ ಪತ್ರಿಕೆಯಲ್ಲಿ ಮಿತ್ರ ಬೇಲೂರುನವಾಬ್ "ಬೊಗಸೆಬೆಳಕು" ಎಂಬ ಕಾಲಂ ಬರೀತಾರೆ.ಕಳೆದ ೫-೬ ತಿ೦ಗಳಿನಿ೦ದ ನವಾಬ್ ಕಾಲಂ ಓದಿದಾಗಲೆಲ್ಲಾ ಪತ್ರಿಕೆಗೆ ಬರೆದು ನವಾಬ್ ಗೆ ಒಂದು ತ್ಯಾಂಕ್ಸ್ ಹೇಳಬೇಕು ಅಂದುಕೊಳ್ತೀನಿ , ಆದರೆ ನನ್ನ ಸೋಮಾರಿತನದಿಂದ ಮತ್ತೊಂದು ವಾರ ಬಂದೇ ಆಗಿರುತ್ತೆ.ಇವತ್ತು ಪತ್ರಿಕೆ ಆಫೀಸ್ ಗೆ ಹೋಗಿದ್ದೆ. ಸಂಪಾದಕರೊಡನೆಯೂ , ಪತ್ರಕರ್ತೆ ಸುವರ್ಣ ರೊಡನೆಯೂ ಲೋಕಾಭಿರಾಮವಾಗಿ ಮಾತನಾಡುವಾಗ ಕಾಲ ಹೋಗಿದ್ದೇ ಗೊತ್ತಾಗಲಿಲ್ಲ. ಅಷ್ಟು ಹೊತ್ತಿಗೆ ಮುರುಳಿನೂ ಬಂದರು,ಮಾತಾಡಿದ್ದೇ ಮಾತಾಡಿದ್ದು. ಸುವರ್ಣ ಯಾವಾಗಲೂ ಆಕ್ಷೇಪ ಮಾಡ್ತಾರೆ, ನಮ್ಮ ಪತ್ರಿಕೆಬಗ್ಗೆ ನೀವೇನೂ ಬರೆಯುವುದೇ ಇಲ್ಲಾ ಅಂತಾ. ಏನ್ ಮಾಡ್ಲಿ ,ನನ್ನ ಸೋಮಾರಿತನ ನನ್ನನ್ನು ಆಕ್ಷೇಪಣೆಗೆ ಗುರಿ ಮಾಡುತ್ತೆ. ಇರಲಿ, ಎಲ್ಲಾ ಪ್ರೀತಿಗಾಗಿ ತಾನೆ? ನಿನ್ನೆ ತಾನೆ ನವಾಬ್ ತುಂಬಾ ಚೆನ್ನಾಗಿಯೇ ಬರೆದಿದ್ದಾರೆ. ಅದರ ಬಗ್ಗೆ ಈಗ ಎರಡು ಮಾತು.....

ಅವರ ಬರವಣಿಗೆಯಲ್ಲಿ ಈ ಭಾರಿ ಭಯೋತ್ಪಾದ್ದಾನೆ, ಮತಾಂತರ, ಚರ್ಚ್ ಮೇಲೆ ಹಲ್ಲೆ, ಎಲ್ಲಾ ಪ್ರಸ್ತಾಪಿಸಿಬಿಟ್ಟಿದ್ದಾರೆ. ಅದೂ ಮುಗ್ಧ ಮಗು ತನ್ನ ಅಮ್ಮನನ್ನು ಕೇಳುವ ನೆಪದಲ್ಲಿ. ಬಾಂಬ್ ಗಳ ಸಿಡಿತದಿಂದ ನವಾಬ್ ಗೆ ಎಷ್ಟು ದು:ಖ ಆಗಿದೆ ಎಂದರೆ " ಜನಮಾನಸದ ಎದೆಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ರಕ್ಕಸರ ಸೆದೆ ಬಡೆಯಬೇಕು " ಅಂತಾರೆ.

ಪ್ರೀತಿಯ ನವಾಬ್,ನಿಮ್ಮ ಮನದಾಳದ ನೋವು ಎಷ್ಟು ಜನರಿಗೆ ಅರ್ಥ ವಾಗುತ್ತೆ? ನಿಮ್ಮ ಮನಸಿನ ತೊಳಲಾಟ ,ವೇದನೆ, ದೇಶದ ಇಂತಹ ಸ್ಥಿತಿಯ ಬಗ್ಗೆ ನಿಮ್ಮ ಆತಂಕ , ಇವೆಲ್ಲಾ ನಿಜವಾದ ಒಬ್ಬ ದೇಶ ಭಕ್ತನಿಗೆ ಇರಬೇಕಾದ ಗುಣಗಳು, ಅದು ನಿಮಗಿದೆ, ನಿಮ್ಮಂತ ಸಹಸ್ರಾರು ಜನ ದೇಶಭಕ್ತರು ತಮಗಾಗಿರುವ ನೋವನ್ನು ತೋಡಿಕೊಂಡಾಗ ಇಂದಿನ ನಮ್ಮ ದೇಶದ ಗಂಭೀರ ಪರಿಸ್ಥಿತಿಗೆ ಪರಿಹಾರ ಸಿಗುವುದೇನೂ ಕಷ್ಟವಾಗಲಾರದು.

ಭಾರತಮಾತೆಯ ಚರಣಕಮಲಗಳಿಗೆ ನಿಮ್ಮ ಒಡಲಾಳದ ನುಡಿಗಳ ಪುಷ್ಪಾರ್ಚನೆ ಅದಾಗಲೇ ಆಗಿದೆ. ನಿಮ್ಮ ಲೇಖನಿಯಿಂದ ಇಂತಹ ನುಡಿಮುತ್ತುಗಳು ಹೊರಬರುತ್ತಿರಲಿ ಎಂದು ಆಶಿಸುವ

ನಿಮ್ಮವನೇ ಆದ

ಹರಿಹರಪುರ ಶ್ರೀಧರ್,

No comments: